ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಒಂದರಮೇಲೆ ಒಂದರಂತೆ ಆಘಾತ ಬಂದೆರಗುತ್ತಿದೆ. ದೀಪಕ್ ಚಾಹರ್ ಹಾಗೂ ಋತುರಾಜ್ ಗಾಯ್ಕ್ವಾಡ್ಗೆ ಕೋವಿಡ್ ಪಾಸಿಟಿವ್ ಬೆನ್ನಲ್ಲೇ, ರೈನಾ ನಿರ್ಗಮನ ತಂಡಕ್ಕೆ ಆಘಾತ ತಂದಿದೆ. ಇದೀಗ ರೈನಾ ಅನಿರೀಕ್ಷಿತ ನಿರ್ಗಮನ ಕುರಿತು ಚೆನ್ನೈ ತಂಡದ ಮಾಲಿಕ ಎನ್.ಶ್ರೀನಿವಾಸನ್ ಮಾತಾಡಿದ್ದಾರೆ.
ರೈನಾ ನಿರ್ಗಮನ ಕುರಿತಂತೆ ಹಲವು ಗುಲ್ಲುಗಳು ಕೇಳಿಬಂದಿದ್ದವು. ರೈನಾ ಚಿಕ್ಕಪ್ಪನನ್ನು ಕಳ್ಳನೊಬ್ಬ ಕೊಂದ ಹಿನ್ನೆಲೆಯಲ್ಲಿ ರೈನಾ ನಿರ್ಗಮಿಸಿದ್ದಾರೆ ಎಂದು ಕೆಲವರು ಹೇಳಿದ್ದರೆ, ಕೆಲವರು ಹೊಟೆಲ್ ರೂಮ್ ವ್ಯವಸ್ಥೆ ಸರಿಯಿಲ್ಲದ ಕಾರಣ ರೈನಾ ನಿರ್ಗಮಿಸಿದ್ದಾರೆ ಎನ್ನುವ ವದಂತಿ ಹರಡಿತ್ತು. ಈ ಬಗ್ಗೆ ಬಿಸಿಸಿಐ ಮಾಜಿ ಅದ್ಯಕ್ಷ ಶ್ರೀನಿವಾಸನ್ ಮಾತಾಡಿದ್ದು, ಕ್ರಿಕೆಟರ್ಗಳು ಹಿಂದಿನ ತಾರಾಮಣಿಗಳಂತೆ ಉದ್ವೇಗಕ್ಕೆ ಒಳಗಾಗುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಒಂದು ಕುಟುಂಬವಿದ್ದಂತೆ. ಹಿರಿಯ ಆಟಗಾರರು ಸಹ ಇಲ್ಲಿ ಹೊಂದಿಕೊಳ್ಳಲು ಕಲಿತಿದ್ದಾರೆ. ಆದಾಗ್ಯೂ ಯಾರಿಗಾದರೂ ಅಸಮಾಧಾನವಿದ್ದರೆ ಧಾರಾಳವಾಗಿ ನಿರ್ಗಮಿಸಬಹುದು. ಕೆಲವು ಬಾರಿ ಯಶಸ್ಸು ನೆತ್ತಿಗೆ ಹತ್ತುತ್ತದೆ ಎಂದು ಪರೋಕ್ಷವಾಗಿ ರೈನಾ ಬಗ್ಗೆ ಮಾತಾಡಿದ್ದಾರೆ. ಅದಲ್ಲದೆ ರೈನಾಗೆ ಅವರು ಕಳೆದುಕೊಂಡ ಮೊತ್ತದ ಬಗ್ಗೆ ಸದ್ಯದಲ್ಲೇ ಅರಿವಾಗಲಿದೆ ಎಂದು ಶ್ರೀನಿವಾಸನ್ ಹೇಳಿದ್ದಾರೆ.
ರೈನಾ ತಂಡವನ್ನು ಸೇರಿಕೊಂಡಾಗಿನಿಂದಲೂ ತಮಗೆ ನೀಡಿದ ಕೋಣೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಧೋನಿಗೆ ನೀಡಿದಂತೆಯೇ ಬಾಲ್ಕನಿಯಿರುವ ಕೊಠಡಿಯನ್ನೇ ತನಗೆ ನೀಡಬೇಕೆಂದು ಪಟ್ಟು ಹಿಡಿದಿದ್ದರು. ತಂಡದ ೧೩ ಜನರಿಗೆ ಕೋವಿಡ್ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಧೋನಿ ಕೊಠಡಿಯಲ್ಲಿ ಇತರರನ್ನು ಸೇರಿಸಲು ಸಾಧ್ಯವೂ ಇಲ್ಲವಾಗಿದ್ದರಿಂದ ರೈನಾ ಅಸಮಅಧಾನ ಹೆಚ್ಚಿತ್ತು ಎನ್ನಲಾಗಿದೆ. ಈಗ ಶ್ರೀನಿವಾಸನ್ ಈ ಬಗ್ಗೆ ಮಾತನಾಡಿರುವುದು ರೈನಾ ನಿರ್ಗಮನದ ಕಾರಣಕ್ಕೆ ಪುಷ್ಠಿ ನೀಡಿದಂತಾಗಿದೆ.