ಬೆಂಗಳೂರು: ರಾಜಧಾನಿಯಲ್ಲಿ ಕೊರೊನಾ ವೈರಾಣು ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಸಕ್ರಿಯ ಪ್ರಕರಣಗಳು ಕಡಿಮೆಯಾಗಿವೆ.
ಕಳೆದ 10 ದಿನಗಳಲ್ಲಿ 23,643 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ನಿತ್ಯ ಪತ್ತೆಯಾಗುತ್ತಿರುವ ಸೋಂಕಿತ ಪ್ರಕರಣಗಳಿಗೆ ಹೋಲಿಸಿದರೆ, ಗುಣಮುಖರಾಗುತ್ತಿರುವವರ ಸಂಖ್ಯೆಯೇ ಹೆಚ್ಚಿದೆ. ನಗರದಲ್ಲಿ ಈವರೆಗೆ 81,733 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ಪೈಕಿ ಶೇ 50ಕ್ಕಿಂತ ಅಧಿಕ ಮಂದಿ (47246) ಚೇತರಿಸಿಕೊಂಡಿದ್ದಾರೆ. ಉಳಿದ 33,148 ಮಂದಿ ನಿಗದಿತ ಆಸ್ಪತ್ರೆಗಳು, ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊರೊನಾ ವೈರಾಣು ಸೋಂಕಿಗೆ 20 ರಿಂದ 50 ವರ್ಷದೊಳಗಿನವರೇ ಹೆಚ್ಚಿನ ಸಂಖ್ಯೆಯಲ್ಲಿ ಪೀಡಿತರಾಗುತ್ತಿದ್ದಾರೆ. ಹೀಗಾಗಿ, ಚೇತರಿಸಿಕೊಳ್ಳುತ್ತಿರುವವರಲ್ಲಿಈ ವಯಸ್ಸಿನವರೇ ಜಾಸ್ತಿ ಇದ್ದಾರೆ.
1893 ಮಂದಿಗೆ ಸೋಂಕು ದೃಢ
ಸಿಲಿಕಾನ್ ಸಿಟಿಯಲ್ಲಿ ಗುರುವಾರ ಒಂದೇ ದಿನ 1893 ಮಂದಿಗೆ ಸೋಂಕು ತಗಲಿದ್ದು, 22 ಮಂದಿ ಬಲಿಯಾಗಿಯಾಗಿದ್ದಾರೆ. ಒಂದೇ ದಿನ 2212 ಮಂದಿ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. ಮೃತಪಟ್ಟವರಲ್ಲಿ 22 ವರ್ಷದ ಯುವತಿಯೂ ಸೇರಿದ್ದಾರೆ. ಹೀಗಾಗಿ ಸದ್ಯ ಸಿಲಿಕಾನ್ ಸಿಟಿಯ ಜನತೆ ಸದ್ಯಕ್ಕೆ ನಿಟ್ಟುಸಿರು ಬಿಡುವಂತಾಗಿದೆ. ಆರಂಭದಲ್ಲಿ ಅಗತ್ಯ ಸೇವೆಗಳ ವ್ಯತ್ಯಯದಿಂದಾಗಿ ಆಸ್ಪತ್ರೆ ಅಂದಾಕ್ಷಣ ನಗರದ ಜನರು ಆತಂಕ ಪಡುವಂತಾಗಿತ್ತು. ಈಗ ಕೊಂಚ ನಿರಾಳವಾದಂತಾಗಿದೆ.